ಪಂದ್ಯಂಡ ಬೆಳ್ಳಿಯಪ್ಪ ಇವರು ಗಾಂಧೀವಾದಿಗಳು, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಕೊಡಗಿನ ರಾಜಕಾರಣಿ. == ಆರಂಭಿಕ ಜೀವನ == ಇವರ ತಂದೆಯ ಹೆಸರು ಪಂದ್ಯಂಡ ಅಯ್ಯಪ್ಪ. ಇವರು ಮಂಗಳೂರಿನ ಸಂತ ಅಲೊಶಿಯಸ್ ಕಾಲೇಜಿನಲ್ಲಿ ತಮ್ಮ ವಿಧ್ಯಾಭ್ಯಾಸ ಮುಗಿಸಿ ಕೊಡಗಿಗೆ ಬಂದು ಶಿಕ್ಷಕರಾಗಿ ಕೆಲಸ ಮಾಡುತಿದ್ದರು. ಆದರೆ ಅದಾಗಲೇ ಅವರಲ್ಲಿ ರಾಷ್ಟ್ರೀಯತಾ ವಿಚಾರಗಳು ಮನಸ್ಸಿನಲ್ಲಿ ಆರಂಭಗೊಂಡಿದ್ದವು ಹಾಗೂ ಮಹಾತ್ಮ ಗಾಂಧಿಯವರ ಜೀವನ ಶೈಲಿ ಹಾಗೂ ಅವರ ತತ್ವಗಳನ್ನು ಅನುಸರಿಸಲು ಆರಂಭಿಸಿದ್ದರು. ಕೊಡಗಿನಲ್ಲಿ ಆಗ, ಸ್ವಾತಂತ್ರ್ಯ ಹೋರಾಟವಾಗಲೀ ರಾಷ್ಟ್ರೀಯತೆಯ ಬಗ್ಗೆಯಾಗಲಿ ಯಾರಿಗೂ ತಿಳಿದಿರಲಿಲ್ಲ. ವಾರ್ತಾ ಪತ್ರಿಕೆಗಳ ಮುಖಾಂತರ, ಬೆಳ್ಳಿಯಪ್ಪನವರು ಈ ವಿಷಯಗಳ ಬಗ್ಗೆ ತಿಳಿದುಕೊಂಡರು. == ಹೋರಾಟ == ಬೆಳ್ಲಿಯಪ್ಪನವರು ಜನರಿಗೆ ರಾಷ್ಟ್ರೀಯತೆಯ ಬಗ್ಗೆ ತಿಳಿಸಲು ಪತ್ರಿಕೋದ್ಯಮವನ್ನು ಅಳವಡಿಸಿಕೊಂಡರು. ಇದು ಟೀಕೆಗೆ ಒಳಗೊಂಡರೂ ಮುಂದೆ ಸ್ವಾತಂತ್ರ್ಯ ಹೋರಾಟಕ್ಕೆ ದಾರಿದೀಪವಾಯಿತು. ಕೊಡಗು ವಾರ್ತಾ ಪತ್ರಿಕೆ ಮನೆಮನೆಗಳಲ್ಲಿ ಒಂದು ಭಾಗವಾಯಿತು. ಕೊಡಗಿನ ಜನತೆ ಸ್ವಾತಂತ್ರ್ಯ ಚಳುವಳಿಗಳನ್ನು ನಡೆಸಲು ನಾಂದಿಯಾಯಿತು. ಬೆಳ್ಳಿಯಪ್ಪನವರು ಮದ್ಯ ನಿಷೇಧ ಚಳುವಳಿಯನ್ನು ಪ್ರಾರಂಭಿಸಿದರು. ಇದರಿಂದ ಸ್ವಾತಂತ್ರ್ಯ ಹೋರಾಟ ಇನ್ನು ತೀವ್ರವಾಯಿತು. ಆ ಸಮಯದಲ್ಲಿ ಮದ್ಯ ಸೇವನೆಗೆ ಯಾವುದೇ ರೀತಿಯ ನಿರ್ಬಂಧವಿರಲಿಲ್ಲ. ಬದಲಾಗಿ ಇದು ಸರ್ಕಾರದ ಬೊಕ್ಕಸವನ್ನು ತುಂಬುತ್ತಿತ್ತು. ಆ ಸಮಯದಲ್ಲಿ ದೇಶದ ಆರ್ಥಿಕ ಸಂಸ್ಥಿತಿ ಕುಸಿದಿತ್ತು. ಅಂಥ ಸಮಯದಲ್ಲಿ ಬ್ರಿಟಿಷರು ಕೊಡಗಿನ ಜನತೆಯಲ್ಲಿ ಮದ್ಯಪಾನ ಸೇವಿಸುವ ಅಭ್ಯಾಸ ತಂದರು. ಬೆಳ್ಳಿಯಪ್ಪನವರು ಈ ಸ್ಥಿತಿಯ ತೀವ್ರತೆಯನ್ನು ಅರ್ಥಮಾಡಿಕೊಂಡು ಮದ್ಯಪಾನದ ನಿಷೇಧ ಚಳುವಳಿಯನ್ನು ಜಾರಿಗೆ ತಂದರು. ಮದ್ಯಪಾನ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಜನತೆಗೆ ತಿಳಿಸಿದರು. ಅವರ ಅರ್ಧಾಂಗಿಯಾದ ಸೀತಾ ಬೆಳ್ಳಿಯಪ್ಪನವರು ಕೊಡಗಿನ ಸ್ತ್ರೀಯರೋಡನೆ ಗುಂಪುಕೂಡಿಕೊಂಡು ರಸ್ತೆರಸ್ತೆಗಳಲ್ಲಿ ಪ್ರತಿಭಟನೆಗಳನ್ನು ಆರಂಭಿಸಿದರು. ಇದು ಬ್ರಿಟಿಷರಲ್ಲಿ ಅಂಜಿಕೆಯನ್ನು ಹುಟ್ಟಿಸಿತು. ಮೊದಲಿಗೆ ಮಾರ್ಚ್ ೨೭, ೧೯೩೦ ರಂದು ಬೆಳ್ಲಿಯಪ್ಪನವರ ನೇತ್ರತ್ವದಲ್ಲಿ, ೯ ಮಂದಿಯನ್ನೊಳಗೊಂಡ, ಸತ್ಯಾಗ್ರಹ ಮಂಡಳಿ ಪ್ರಾರಂಭವಾಯಿತು. ಪೊನ್ನಂಪೇಟೆ, ಮಡಿಕೇರಿ, ಅಮ್ಮತ್ತಿ, ವಿರಾಜಪೇಟೆ, ಹುದಿಕೇರಿ, ಶ್ರೀಮಂಗಲ, ನಾಪೊಕ್ಲು ಹಾಗೂ ಇನ್ನಿತರ ಜಾಗಗಳಲ್ಲಿ ಪ್ರತಿಭಟನೆಗಳು ನಿರಂತರವಾಗಿ ಸಾಗಿದವು. ಕೊಡಗಿನ ಸ್ತ್ರೀಯರು ರಸ್ತೆಗಿಳಿದು ಪ್ರತಿಭಟಿಸುವುದು ಗಮನಾರ್ಹವಾಗಿತ್ತು. == ಸಾಧನೆ == ರಾಷ್ಟ್ರಪಿತರಾದ ಮಹಾತ್ಮ ಗಾಂಧಿಯವರು ಕೊಡಗಿಗೆ ಬರಲು ಕಾರಣರಾದವರು ಪಂದ್ಯಂಡ ಬೆಳ್ಳಿಯಪ್ಪನವರು. ಇವರ ಬರುವಿಕೆಯಿಂದಾಗಿ ಕೊಡಗನ ಕೀರ್ತಿ ರಾಷ್ಟ್ರಮಟ್ಟಕ್ಕೆ ಏರಿತು. ಬೆಳ್ಲಿಯಪ್ಪನವರು ಮಹಾತ್ಮ ಗಾಂಧಿಯವರಿಗೆ ಬಹಳ ನಿಕಟರಾಗಿದ್ದರು. ಕಾಂಗ್ರೆಸ್ಸಿನ ಸಭೆ ಸಮಾರಂಭಗಳಲ್ಲಿ ಸಂಧಿಸುತ್ತಿದ್ದರು ಹಾಗೂ ಪತ್ರಿಕೆಗಳ ಮೂಲಕ ಸಂವಹನ ಮಾಡುತ್ತಿದ್ದರು. ಫೆಬ್ರವರಿ ೨೧, ೧೯೩೪ ರಂದು ಬೆಳ್ಳಿಯಪ್ಪನವರ ವಿನಂತಿಯನ್ನು ಸ್ವೀಕರಿಸಿ ಮಹಾತ್ಮ ಗಾಂಧಿಯವರು ಕೊಡಗಿಗೆ ಬಂದರು. ಮಡಿಕೇರಿಯಲ್ಲಿ ಜನರನ್ನುದ್ದೇಶಿಸಿ ಭಾಷಣ ಮಾಡಿದರು. ಇದರ ಜ್ಞಾಪಕವಾಗಿ ಅವರು ಭಾಷಣ ಮಾಡಿದ್ದ ಸ್ಥಳವನ್ನು ಗಾಂಧಿಮೈದಾನವೆಂದು ಘೋಷಿಸಿ ಗಾಂಧಿಯವರ ಪ್ರತಿಮೆಯನ್ನು ಅಲ್ಲಿ ಸ್ಥಾಪಿಸಲಾಯಿತು. ಕೊಡಗಿನಲ್ಲಿ ಈಗ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಕಾಲೇಜು ಎಂದು ಪ್ರಸಿದ್ಧ ಕಾಲೇಜಿನ ಹುಟ್ಟಿಗೆ ಕಾರಣರಾದವರು, ಬೆಳ್ಳಿಯಪ್ಪನವರು. ಕಾಲೇಜು ಇಲ್ಲವಾಗಿದ್ದ ಕಾರಣದಿಂದಾಗಿ, ಕೊಡಗಿನ ಯುವಕ ಯುವತಿಯರು ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸುತ್ತಿದ್ದರು. ಇದು ಕೊಡಗಿನ ಬೆಳವಣಿಗೆಗೆ ಕುಂದು ತರುತ್ತದೆ ಎಂದು ಮನಗೊಂಡ ಬೆಳ್ಲಿಯಪ್ಪನವರು ಬಿ. ಡಿ. ಗಣಪತಿಯವರೊಂದಿಗೆ ದಿಲ್ಲಿಗೆ ಹೋದರು. ಅಲ್ಲಿ ಶಿಕ್ಷಣ ಮಂತ್ರಿಯವರನ್ನು ಭೇಟಿ ಮಾಡಿದರು. ಅವರು, ಆಗಿನ ಮುಖ್ಯ ಆಯುಕ್ತರಾಗಿದ್ದ ಶ್ರೀ ಮೊದಲಿಯರ್ ಅವರಿಗೆ ವಿಷಯವನ್ನು ಪರಿಗಣಿಸಲು ನಿರ್ದೇಶಿಸಿದರು. ಈ ಮಧ್ಯ ಬೆಳ್ಳಿಯಪ್ಪನವರು, ಶಿಕ್ಷಣ ಇಲಾಖೆ, ಹಣಕಾಸು ಇಲಾಖೆಯವರನ್ನು ಭೇಟಿಮಾಡಿದರು. ಈ ವಿಚಾರವಾಗಿ ಬೆಳ್ಳಿಯಪ್ಪನವರು ದಿಲ್ಲಿಯಲ್ಲಿ ೧೫ ದಿವಸಗಳ ಕಾಲ ತಂಗಿದ್ದರು. ಈ ಸಮಯದಲ್ಲಿ ಅವರು ಕೇಂದ್ರ ಆಹಾರ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಕರುಣಾಕರಣ್ ಅವರನ್ನು ಭೇಟಿ ಮಾಡಿ ಕೊಡಗಿನ ರೈತರ ಸ್ಥಿತಿಯನ್ನು ವಿವರಿಸಿ ಕೊಡಗಿನ ಭತ್ತದ ಬೆಲೆ ಏರಿಕೆಗೆ ಕಾರಣರಾದರು. === ರಾಜಕೀಯ ಜೀವನ === ಇವರು ೪೦ ವರ್ಷಗಳ ಕಾಲ ಕೊಡಗಿನ ಮೂಲೆಮೂಲೆಗೆ ಹೋಗಿ ರಾಷ್ಟ್ರೀಯತೆಯ ಅರಿವು ಹಾಗೂ ಜಮೀನುದಾರರ ಸಂಘವನ್ನು ಸ್ಥಾಪಿಸಿದರು. ಸ್ವಾತಂತ್ರ್ಯ ಚಳುವಳಿಯಲ್ಲಿ ನಾಲ್ಕು ಬಾರಿ ಜೈಲಿಗೆ ಹೋಗಿಬಂದರು. ಅವರ ಹೆಂಡತಿ ಮತ್ತು ಮಕ್ಕಳು ಅವರನ್ನು ಹಿಂಬಾಲಿಸಿದರು. ಕೊಡಗಿನಲ್ಲಿ ಹಲವು ರಸ್ತೆಗಳಿಗೆ ಇವರ ಹೆಸರನ್ನು ಇಡಲಾಗಿದೆ. ೧೯೫೨ ರಲ್ಲಿ ಅವರು ಕಾಂಗ್ರೆಸಿನಿಂದ ಬೇರೆಯಾಗಿ ತಮ್ಮದೇ ಆದ "ತಕ್ಕಡಿ" ಎಂಬ ಪಕ್ಷ ಕಟ್ಟಿದರು. ಕೊಡಗು ಒಂದು ಪ್ರತ್ಯೇಕ ರಾಜ್ಯವಾಗಿ ಉಳಿಯಬೇಕೆಂಬುದು ಈ ಪಕ್ಷದ ಉದ್ದೇಶವಾಗಿತ್ತು ಚುನಾವಣೆ ಕೂಡ ನಡೆಯಿತು. ಆದರೆ ಅವರು ಕಾಂಗ್ರೆಸ್ ಪಕ್ಷಕ್ಕೆ ಸೋತರು. ತಕ್ಕಡಿ ಪಕ್ಷವು ಒಂದು ಪ್ರಭಲ ಪಕ್ಷವಾಗಿ ರೂಪಗೊಂಡಿತು. ಬೆಳ್ಳಿಯಪ್ಪನವರು ಮಡಿಕೇರಿಯ ಪೆನ್ಸ್ಂನ್ ಲೇನ್ ನಲ್ಲಿ ವಾಸಿಸುತಿದ್ದರು. ಅವರು ವಾಸಿಸುತ್ತಿದ್ದ ಮನೆಗೆ 'ಗಾಂಧಿ ಭವನ' ಎಂದೇ ಹೆಸರಿತ್ತು. ಅವರ ಗೌರವ ಸಂಕೇತವಾಗಿ ಈ ರಸ್ತೆಗೆ ಅವರ ಹೆಸರೇ ಇಡಲಾಯಿತು. ೧೯೬೬ ರಲ್ಲಿ ಬೆಳ್ಳಿಯಪ್ಪನವರು, ತಮ್ಮ ಮನೆಯಲ್ಲಿಯೇ ಕೊನೆಯುಸಿರೆಳೆದರು. == ಉಲ್ಲೇಖಗಳು ==